[ಚಿ. ವಿ. ಶ್ರೀನಾಥಶಾಸ್ತ್ರೀಯವರು
ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಇದಬೇಕು ಎಂಬುದರ ಕುರಿತಾಗಿ ಬರೆದ ಲೇಖನ]
ಪ್ರಾಥಮಿಕ ಶಿಕ್ಷ್ಷಣವೆಂದರೆ ಮಕ್ಕಳು ತಾವು ನೋಡಿದ, ಓದಿದ
ಹಾಗೂ ಕೇಳಿದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು, ಕಲಿತ ವಿಷಯಗಳ
ಬಗ್ಗೆ ಆಸಕ್ತಿ ತೋರಿಸುವುದು, ನೆನಪಿನಲ್ಲಿನ ವಿಷಯಗಳನ್ನು ಮನಸ್ಸಿಗೆ ತಂದುಕೊಂಡು
ಅವುಗಳ ಬಗ್ಗೆ ಆಲೋಚಿಸುವುದು, ತಾವು ತಿಳಿದ ವಿಚಾರಗಳನ್ನು ಮನಸ್ಸಿಗೆ ತಂದುಕೊಂಡು
ಅವುಗಳನ್ನು ಮಥಿಸಿ ಹೊಸ ವಿಚಾರಗಳನ್ನು ಕಂಡುಕೊಳ್ಳುವುದು.

ವಿಶ್ವಾದ್ಯಂತ ಮನಶ್ಶಾಸ್ತ್ರಜ್ಞರು ನಡೆಸಿರುವ ಆಳವಾದ
ಸಂಶೋಧನೆಗಳ ಫಲಿತಾಂಶಗಳಿಂದ ತಿಳಿಸಿರುವಂತೆ ಯಾರಲ್ಲೇ ಆಗಲಿ ಮೆದುಳು ಸಂಬಂಧದ ಬುದ್ಧಿವಂತಿಕೆಯ ಮೇಲ್ಕಂಡ
ಈ  ಪ್ರವೃತ್ತಿಗಳು (ಐಕ್ಯು) ೧೨ ವರ್ಷಗಳೊಳಗಾಗಿ ಮಾತ್ರ
ಬೆಳೆದುಬರುತ್ತವೆ. ಆದ್ದರಿಂದ ಮಕ್ಕಳು ನಿಜವಾಗಿ ಬುದ್ಧಿವಂತರಾಗಲು ಯಾವುದೇ ತೊಡಕಿಲ್ಲದ ವೈಜ್ಞಾನಿಕ
ಭಾಷೆಗಳ ಮೂಲಕ ನೀಡುವ ಶಿಕ್ಷಣದಿಂದ ಮಾತ್ರ ಸಾಧ್ಯ. ಬಹುಮುಖ್ಯವಾಗಿ ಭಾರತೀಯ ಭಾಷೆಗಳು ಅತ್ಯಂತ ವೈಜ್ಞಾನಿಕ, ಅಸಂದಿಗ್ಧ,
ಧ್ವನ್ಯಾತ್ಮಕ. ಆದ್ದರಿಂದ ಕನಿಷ್ಠ ಪ್ರೌಢಶಾಲೆಯವರೆಗೆ ಭಾರತೀಯ ಭಾಷೆಗಳ ಮಾಧ್ಯಮದಲ್ಲಿ
ವಿದ್ಯಾಭ್ಯಾಸ ಮಾಡಿದ ಮಕ್ಕಳಲ್ಲಿ ವಿಷಯಗ್ರಹಣೆ, ಅವುಗಳನ್ನು ಕುರಿತ ಚಿಂತನೆ,
ಸಮರ್ಥವಾದ ಸಂವಹನೆ ಮುಂತಾದ ಬಹುಮುಖ್ಯವಾದ ನಿಜವಾದ ಹಾಗೂ ಆಳವಾದ ಬುದ್ಧಿವಂತಿಕೆಯ
ಅಂಶಗಳು ಹೆಚ್ಚಾಗಿ ಬೆಳೆದಿರುತ್ತವೆ.
ಆದರೆ ಅತ್ಯಂತ ಅವೈಜ್ಞಾನಿಕ, ಸಂದಿಗ್ಧಮಯ
ಹಾಗೂ ಧ್ವನ್ಯಾತ್ಮಕವಲ್ಲದ ಇಂಗ್ಲಿಷ್ ಭಾಷೆಯು ಪ್ರೌಢಶಾಲೆಯವರೆಗೆ ಶಿಕ್ಷಣ ಮಾಧ್ಯಮ ಆಗಬಾರದು. ಆರಂಭದಿಂದಲೇ
ಇಂಗ್ಲಿಷ್ ಭಾಷಾ ಮಾಧ್ಯಮಕ್ಕೆ ತಳ್ಳಲ್ಪಟ್ಟ ಮಕ್ಕಳು ಇಂಗ್ಲಿಷ್ ಭಾಷೆ ಕಲಿತಿದ್ದರೂ ಅವರಲ್ಲಿ ಬುದ್ಧಿವಂತಿಕೆಯ
ಲಕ್ಷಣಗಳು ಕಡಮೆ ಆಗಿರುತ್ತವೆ. ಇಂಗ್ಲಿಷ್ ಪದಗಳ ಸ್ಪೆಲಿಂಗುಗಳು, ವಾಕ್ಯರಚನೆ
ಇವುಗಳತ್ತ ಅತಿಹೆಚ್ಚಿನ ಗಮನವನ್ನು ಕೊಡಬೇಕಾದ ಮಕ್ಕಳಲ್ಲಿ ಕಲಿಕೆಯ ವಿಷಯದತ್ತ ಮನಸ್ಸು ಬಹಳ ಕಡಮೆಯಾಗಿರುತ್ತದೆ.
ಇದು ಇಂಗ್ಲಿಷ್ ಮಾತೃಭಾಷೆಯ ಮಕ್ಕಳಿಗೂ ಅನ್ವಯಿಸುತ್ತದೆ. ಆದ್ದರಿಂದಲೇ ಅಮೆರಿಕಾದವರ ಬುದ್ಧಿವಂತಿಕೆಯ
ಮಟ್ಟ (ಐಕ್ಯೂ) ಭಾರತೀಯರಿಗಿಂತಲೂ ಕಡಮೆ ಎಂಬುದು ಸರ‍್ವವೇದ್ಯವಾಗಿರುವ ಸಂಗತಿ. ಇದನ್ನು ಇತ್ತೀಚೆಗೆ
ಅಮೆರಿಕಾದ ಅಧ್ಯಕ್ಷ ಶ್ರೀ ಒಬಾಮಾ ಅವರೂ ಹೇಳಿದ್ದಾರೆ. ಈ ದೃಷ್ಟಿಯಿಂದ ಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆಗೆ
ಸಂಬಂಧಿಸಿದಂತೆ ನೈಜ, ತಾತ್ವಿಕ ಹಾಗೂ ವೈಜ್ಞಾನಿಕ ಅಂಶಗಳತ್ತ ಎಲ್ಲರೂ ಯೋಚಿಸಬೇಕಾಗಿದೆ.
ಆರಂಭದಲ್ಲಿ ನಿಜವಾದ ಹಾಗೂ ಪರಿಪೂರ್ಣವಾದ ಭಾಷೆಗಳಾಗಿರುವ
ಭಾರತೀಯ ಭಾಷೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳಿಗೆ 
ಐದನೆಯ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷಾ ಪಠ್ಯವನ್ನಾಗಿ ಬೋಧಿಸಬೇಕು. ಈ ವೇಳೆಗಾಗಲೇ
ಮಕ್ಕಳಲ್ಲಿ ಬೆಳೆದುಬಿಟ್ಟಿರುವ ಬೌದ್ಧಿಕ ಅಂಶಗಳಿಗೆ ಇಂಗ್ಲಿಷ್ ಭಾಷೆಯ ಕಲಿಕೆಯಿಂದ ಯಾವ ಅಪಾಯವೂ ಉಂಟಾಗುವುದಿಲ್ಲ.
ಆಗ ಆವರಿಗೆ ಉಂಟಾಗಬಹುದಾದ ಇಂಗ್ಲಿಷ್ ಕುರಿತ ಭಯ, ಆತಂಕ, ಕೀಳರಿಮೆ ಇವುಗಳನ್ನು
ನಿವಾರಿಸಬೇಕು. ಇದಕ್ಕಾಗಿ ಆರು, ಏಳನೆಯ ತರಗತಿಗಳಲ್ಲಿ ಇಂಗ್ಲಿಷನ್ನು ಸಂಭಾಷಣಾ
ರೂಪದಲ್ಲೂ ಹೇಳಿಕೊಡಬೇಕು. ಆಗ ಅವರು ಇಂಗ್ಲಿಷ್ ಭಾಷೆಯಲ್ಲಿನ ಅವೈಜ್ಞಾನಿಕ ಹಾಗೂ ಗೊಂದಲಮಯ ಅಂಶಗಳನ್ನು
ಅರಗಿಸಿಕೊಂಡು ಇಂಗ್ಲಿಷ್ ಭಾಷೆಯಲ್ಲೂ ಪರಿಣತರಾಗುತ್ತಾರೆ. ಹೀಗೆ ಒಂದು ಹಂತದವರೆಗೆ ಕನ್ನಡ ಮಾಧ್ಯಮದಲ್ಲಿ
ಕಲಿತ ವಿದ್ಯಾರ್ಥಿಗಳು ಮುಂದೆ ಇಂಗ್ಲಿಷ್ ಮಾಧ್ಯಮಕ್ಕೆ ಬದಲಿಸಿಕೊಳ್ಳಲು ಸುಲಭ. ಅವರು ಈ ಬದಲಾವಣೆಯಲ್ಲಿ
ಯಾವ ತೊಡಕನ್ನೂ ಕಾಣಲಾರರು. ಇದನ್ನು ಅನೇಕ ಪ್ರಾಜ್ಞರು, ಮನೋವಿಜ್ಞಾನಿ ಗಳು,
ಶಿಕ್ಷಣವೇತ್ತರು ಹೇಳಿದ್ದಾರೆ. ಇದು ಎಲ್ಲ ಹಿರಿಯ ವಿದ್ವಾಂಸರ, ಚಿಂತಕರ, ಅನೇಕಾನೇಕ ಮಿತ್ರರ, ನನ್ನ
ಮತ್ತು ನಮ್ಮ ಮಕ್ಕಳ ಅನುಭವ.
ದುರದೃಷ್ಟವಶಾತ್ ಶಿಕ್ಷಣದ ಭಾಷೆಯ ವಿಷಯಕ್ಕೆ ಸಂಬಂಧಿಸಿದಂತೆ
ಕೇವಲ ಸರ‍ಕಾರಿ ಶಾಲೆಗಳತ್ತ ಮಾತ್ರ ಎಲ್ಲರ ಗಮನ ಹರಿಯುತ್ತಿದೆ. ಅವುಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ
ಪರಿವರ್ತಿಸುವ ತನ್ಮೂಲಕ ಮಕ್ಕಳ ಬುದ್ಧಿಶಕ್ತಿಯ ಬೆಳವಣಿಗೆಗೆ ಮತ್ತು ಕನ್ನಡಕ್ಕೆ ಅಪಾಯ ಉಂಟುಮಾಡುವ
ಕ್ರಿಯೆ ಆರಂಭವಾಗಿದೆ ಎಂಬುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಇದು ಆಗಬಾರದು. ಅಲ್ಲದೆ  ಬಹುಮುಖ್ಯವಾಗಿ ಎಲ್ಲ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳತ್ತಲೂ
ನಮ್ಮ ತೀವ್ರವಾದ ಗಮನ ಹರಿಯಬೇಕು. ಅವುಗಳೆಲ್ಲವೂ ಕನ್ನಡ ಮಾಧ್ಯಮ ಶಾಲೆಗಳಾಗಲೇಬೇಕು. ಈ ಕುರಿತು ಯೋಚಿಸುವವರು
ವೈಯಕ್ತಿಕ, ರಾಜಕೀಯ, ಸಾಮಾಜಿಕ, ಧಾರ‍್ಮಿಕ ಮುಂತಾದ
ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ನಡುವೆ ಇರಬಹುದಾದ ಅಭಿಪ್ರಾಯ ಭೇದಗಳು, ಪರಸ್ಪರ ವಿರೋಧಿ ನಿಲುವುಗಳು, ಟೀಕಾಪ್ರಹಾರಗಳು ಮುಂತಾದವನ್ನು
ಬದಿಗಿಟ್ಟು ಕೇವಲ ವಿಷಯಾಧಾರಿತವಾಗಿ ಶಿಕ್ಷಣದ ಭಾಷಾಮಾಧ್ಯಮ ವಿಷಯದಲ್ಲಿ ಒಮ್ಮತದ ಅಭಿಪ್ರಾಯಗಳಿಗೆ
ಬಂದು, ಪ್ರಾಥಮಿಕ ಹಂತದಲ್ಲಿ ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾಗಿರಲು
ಹಾಗೂ ಈ ಬಗ್ಗೆ ಜನತೆಯಲ್ಲಿ ತಿಳಿವಳಿಕೆ ಮೂಡಿಸಲು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.    
ಒಟ್ಟಿನಲ್ಲಿ ಕೇವಲ ಇಂಗ್ಲಿಷ್ ಪರವಾಗಿಯೇ ಯೋಚಿಸುವ
ಪೋಷಕರ, ಶಾಲಾ ವಿದ್ಯಾರ್ಥಿಗಳ ಹಾಗೂ ಜನತೆಯ ಭಯ, ಅನುಮಾನ, ತಪ್ಪು ಅಭಿಪ್ರಾಯಗಳು ಮುಂತಾದವನ್ನು ಹೋಗಲಾಡಿಸಲು
  • ಖಾಸಗಿ ಶಾಲೆಗಳನ್ನು ನಡೆಸುವವರೆಲ್ಲರೂ ಈ ಬಗ್ಗೆ ನ್ಯಾಯಯುತವಾಗಿ, ವೈಜ್ಞಾನಿಕವಾಗಿ ಚಿಂತಿಸಿ ಕೂಡಲೇ ತಮ್ಮ ಪ್ರಾಥಮಿಕ ಶಾಲೆಗಳನ್ನು ಕನ್ನಡ ಮಾಧ್ಯಮ ಶಾಲೆಗಳನ್ನಾಗಿ
    ಬದಲಿಸಬೇಕು. ಇದಕ್ಕಾಗಿ ಸಾಹಿತಿಗಳು, ಬೌದ್ಧಿಕ ಮಾನ್ಯರು,
    ಕನ್ನಡ ಪರವಾದ ಚಿಂತಕರು, ಕನ್ನಡ ಹೋರಾಟಗಾರರು ಮುಂತಾದವರೆಲ್ಲರೂ
    ಜನತೆಗೆ ತಿಳಿವಳಿಕೆ ನೀಡುವ ಹಾಗೂ ಇಂಗ್ಲಿಷ್ ಶಾಲೆಗಳ ವಿರುದ್ಧ  ಪ್ರತಿಭಟನೆ, ಚಳುವಳಿ,
    ಪ್ರಚಾರ ಮುಂತಾದ ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
  • ಶಿಕ್ಷಣದ ಬಗ್ಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಶಾಲೆಗಳನ್ನು ನಡೆಸುವವರು ಈ ವಿಷಯಗಳನ್ನು
    ಗಮನಕ್ಕೆ ತೆಗೆದುಕೊಂಡು ಕರ್ನಾಟಕ ರಾಜ್ಯಾದ್ಯಂತ ಎಲ್ಲ ಸರ‍್ಕಾರಿ, ಖಾಸಗಿ (ಅನುದಾನಿತ/ ಅನುದಾನರಹಿತ/ಸ್ವತಂತ್ರ) ಶಾಲೆಗಳಲ್ಲೂ ಕನಿಷ್ಠ ಪ್ರೌಢಶಾಲೆಯವರೆಗೆ
    ಶಿಕ್ಷಣವು ಕನ್ನಡ ಮಾಧ್ಯಮದಲ್ಲೇ ಇರುವಂತೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು.
  • ವಿಚಾರಗಳನ್ನು ಜನತೆಗೆ ತಿಳಿಸಿಕೊಟ್ಟು ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್
    ಮಾಧ್ಯಮದ ಶಿಕ್ಷಣದ ಅಗತ್ಯವಿಲ್ಲ, ಅದು ಬುದ್ಧಿ ಬೆಳವಣಿಗೆಗೆ ಅಪಾಯ ಎಂಬ ವಿಚಾರಗಳನ್ನು
    ತಿಳಿಸಿಕೊಡಲು ಹಾಗೂ ಅವರಿಗೆ ಈ ಬಗ್ಗೆ ಇರಬಹುದಾದ ಅನುಮಾನಗಳನ್ನು ನಿವಾರಿಸಲು ಎಲ್ಲ ಪ್ರಾಜ್ಞರೂ
    ಪ್ರಯತ್ನಿಸಬೇಕು.
ಮೆಕಾಲೆ ಕನಸು ನನಸಾಗಬೇಕೆ?
ಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆಯ ವಿಷಯವನ್ನು
ಕುರಿತ ಒಂದು ಮುಖ್ಯವಾದ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪರಕೀಯರ ಆಳ್ವಿಕೆಯಲ್ಲಿದ್ದ
ಭಾರತೀಯರ ಬುದ್ಧಿವಂತಿಕೆ, ಅದ್ಭುತ ಆಲೋಚನಾ ಪ್ರವೃತ್ತಿ ಇವುಗಳನ್ನು ಸುಮಾರು ನೂರೈವತ್ತು  ವರ್ಷಗಳ ಹಿಂದೆ ಗಮನಿಸಿದ ಲಾರ್ಡ್ ಮೆಕಾಲೆ ಭಾರತದಲ್ಲಿ ಇಂಗ್ಲಿಷ್
ವಿದ್ಯಾಭ್ಯಾಸವನ್ನು ಜಾರಿಗೆ ತಂದು ಜನರ ಬುದ್ಧಿವಂತಿಕೆಯನ್ನು ಕಡಮೆಗೊಳಿಸಲು ಯತ್ನಿಸಿದ್ದು ಎಲ್ಲರಿಗೂ
ತಿಳಿದಿರುವ ವಿಷಯ.


೨.೨.೧೮೩೫ರಂದು ಬ್ರಿಟಿಷ್
ಪಾರ‍್ಲಿಮೆಂಟ್‌ನಲ್ಲಿ ಲಾರ್ಡ್ ಮೆಕಾಲೆ ಮಾಡಿದ ಭಾಷಣ:
ನಾನು ಭಾರತದ ಉದ್ದಗಲಗಳಲ್ಲಿ
ಪ್ರವಾಸ ಮಾಡಿದ್ದೇನೆ. ಯಾವ ಜಾಗದಲ್ಲೂ ನಾನು ಒಬ್ಬನೇ ಒಬ್ಬ ಭಿಕ್ಷುಕನನ್ನಾಗಲೀ
, ಕಳ್ಳನನ್ನಾಗಲೀ
ನೋಡಲಿಲ್ಲ. ಅತ್ಯುನ್ನತ ಮಟ್ಟದ ನೈತಿಕತೆಯ ಐಶ್ವರ್ಯವನ್ನೂ, ಅತಿ ಹೆಚ್ಚಿನ
ಬೌದ್ಧಿಕ ಸಂಪತ್ತನ್ನೂ ಅವರು ಹೊಂದಿದ್ದಾರೆ. ಈ ದೇಶದ ಬೆನ್ನೆಲುಬಾದ ಅತ್ಯಮೂಲ್ಯ ಆಧ್ಯಾತ್ಮಿಕ ಹಾಗೂ
ಸಾಂಸ್ಕೃತಿಕ ಪರಂಪರೆಯನ್ನು ನಾವು ಮುರಿಯದಿದ್ದರೆ ಈ ದೇಶವನ್ನು ನಾವು ನಿಜವಾಗಿ ಗೆಲ್ಲಲು ಸಾಧ್ಯವೇ
ಇಲ್ಲ. ಆದ್ದರಿಂದ ನಾವು ಈ ದೇಶದ ಪ್ರಾಚೀನ ವಿದ್ಯಾಭ್ಯಾಸ ಪದ್ಧತಿಯನ್ನು ನಮ್ಮ ಪದ್ಧತಿಯಿಂದ ಬದಲಿಸಬೇಕು.
ಭಾರತೀಯರು ಇಂಗ್ಲಿಷ್ ಭಾಷೆ, ವಿದೇಶಿ ವಿಚಾರಗಳು ಮುಂತಾದವೆಲ್ಲಾ ಚೆನ್ನಾಗಿವೆ
ಮತ್ತು ತಮಗಿಂತಾ ಉತ್ತಮ ಎಂದುಕೊಂಡರೆ ಆಗ ಅವರು ತಮ್ಮತನವನ್ನು, ತಮ್ಮ ಸಂಸ್ಕೃತಿಯನ್ನು
ಮರೆಯುತ್ತಾರೆ. ಇದರಿಂದಾಗಿ ನಾವು ಅವರೇನಾಗಬೇಕು ಅಂದುಕೊಂಡಿದ್ದೇವೋ ಅದೇ ಆಗುತ್ತಾರೆ ಮತ್ತು ಭಾರತವು
ನಿಜವಾಗಿ ಪರಕೀಯ ಆಳ್ವಿಕೆಯ ದೇಶವಾಗುತ್ತದೆ”.  

ಆದರೆ ಆಗ ಭಾರತಾದ್ಯಂತ ಪ್ರೌಢಶಾಲೆಯವರೆಗೂ ಭಾರತೀಯ
ಭಾಷೆಗಳೇ ವಿದ್ಯಾಭ್ಯಾಸದ ಭಾಷೆಗಳಾಗಿದ್ದುದರಿಂದ ಭಾರತೀಯರ ಬುದ್ಧಿವಂತಿಕೆಗೆ ಅಪಾಯವೊಡ್ಡುವ ಪರಕೀಯರ
ದುರುದ್ದೇಶಗಳು ಸಫಲವಾಗಲಿಲ್ಲ. ದುರದೃಷ್ಟವಶಾತ್, ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆಯನ್ನು
ಕುರಿತು ವೈಜ್ಞಾನಿಕವಾಗಿ ಆಲೋಚಿಸದೆ ಭಾರತದ ಮೂಲೆ ಮೂಲೆಗಳಲ್ಲಿ ವಿದ್ಯಾಸಂಸ್ಥೆಗಳನ್ನು ನಡೆಸುವವರು
ಪೂರ್ವ ಪ್ರಾಥಮಿಕ ಶಾಲೆಗಳಿಂದಲೂ ಮಕ್ಕಳು ಅತ್ಯಂತ ವೈಜ್ಞಾನಿಕವಾದ ತಮ್ಮ ಮಾತೃಭಾಷೆ/ಭಾರತೀಯ ಭಾಷೆಗಳನ್ನು
ದೂರೀಕರಿಸುವ ಕಾರ್ಯಕ್ರಮ ಗಳನ್ನು ಕೈಗೊಂಡು ತನ್ಮೂಲಕ ಭಾವಿಪ್ರಜೆಗಳಾಗುವ ಮಕ್ಕಳ ಬುದ್ಧಿವಂತಿಕೆಗೆ
ತನ್ಮೂಲಕ ಭಾರತದ ಹಿತಾಸಕ್ತಿಗಳಿಗೆ ಅಪಾಯಗಳನ್ನು ಒಡ್ಡುತ್ತಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಇತ್ತೀಚಿನ ಅಗತ್ಯಗಳಿಗೆ
ಅನುಸಾರವಾಗಿ ಸೂಕ್ತ ಪಠ್ಯ ಹಾಗೂ ಶಿಕ್ಷಣ ಕ್ರಮಗಳಲ್ಲಿ ಸುಧಾರಣೆಗಳನ್ನು ಉಂಟುಮಾಡುವುದು ನಮ್ಮ ಉದ್ದೇಶವಾಗಿರಬೇಕೇ
ಹೊರತು ಮೆಕಾಲೆಯ ಕನಸುಗಳನ್ನು ಸಾಕಾರಗೊಳಿಸುವುದಲ್ಲ.
ಅಂದರೆ ಈ ಬಾಹ್ಯ ಉಪಕರಣವಾದ ಇಂಗ್ಲಿಷ್ ಭಾಷೆಯನ್ನು
ಸರಿಯಾಗಿ ಬಳಸಿಕೊಳ್ಳಬೇಕಾದರೆ ಭಾರತದ ಪ್ರತಿರಾಜ್ಯದಲ್ಲೂ ಪ್ರಾಥಮಿಕ ಶಿಕ್ಷಣವು ಎಲ್ಲರ ಅವಿಭಾಜ್ಯ
ಮಾನಸಿಕ ಅಂಗವಾಗಿ ಅತ್ಯಂತ ವ್ಶೆಜ್ಞಾನಿಕ, ಸುಸಂಬದ್ಧ ಹಾಗೂ ಧ್ವನ್ಯಾತ್ಮಕ ಗುಣಗಳಿಂದ ಶೋಭಿಸುತ್ತಿರುವ
ಆಯಾ ರಾಜ್ಯಭಾಷೆಯಲ್ಲಿಯೇ (ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿಯೇ) ಇರಬೇಕು. ಭಾಋತೀಯ ಭಾಷೆಗಳ ನಡುವೆ
ಭಾಷಾಸಾಮರಸ್ಯ ಇರುವುದರಿಂದ ಮಕ್ಕಳು ಯಾವುದೇ ಒಂದು ಭಾರತೀಯ ಭಾಷೆಯಿಂದ ಇನ್ನೊಂದು ಭಾಷೆಗೆ ಬದಲಿಸಿಕೊಳ್ಳುವುದು
ಸುಲಭ. ಆದರೆ ಭಾರತದಲ್ಲಿ ಕನಿಷ್ಠ ಪ್ರಾಥಮಿಕ ಶಿಕ್ಷಣಕ್ಕೆ ಇಂಗ್ಲಿಷ್ ಖಂಡಿತಾ ಇರಕೂಡದು ಎಂಬುದು ಬಹುಮುಖ್ಯ.
ಇದನ್ನು ಎಲ್ಲರೂ ತೀವ್ರವಾಗಿ ಗಮನಿಸಿ ಕಾರ‍್ಯರೂಪಕ್ಕೆ ತರಬೇಕು. ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ
ಪೂರ್ಣ ವೈಜ್ಞಾನಿಕ ಹಾಗೂ ತಾತ್ವಿಕ ದೃಷ್ಟಿಕೋನದಿಂದ ಅನೇಕ ಚಿಂತಕರು ಪ್ರತಿಪಾದಿಸಿರುವ ವಿಷಯಗಳನ್ನು
ಯಾವುದೇ ದುರಭಿಮಾನ, ಹುಚ್ಚು ಭಾಷಾಭಿಮಾನ, ಇವುಗಳಿಲ್ಲದೆ
ಕೇವಲ ನಮ್ಮ ಮುಂದಿನ ಪೀಳಿಗೆಯ ಬುದ್ಧಿವಂತಿಕೆಯ ಕುಸಿತವನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು,
ಎಲ್ಲರೂ ತೀವ್ರವಾಗಿ ಗಮನಿಸಬೇಕು. ಕರ್ನಾಟಕದಲ್ಲಿ ಖಾಸಗಿ ಶಾಲೆಗಳನ್ನು ನಡೆಸುವವರೆಲ್ಲರೂ
ಈ ಬಗ್ಗೆ ನ್ಯಾಯಯುತವಾಗಿ, ವೈಜ್ಞಾನಿಕವಾಗಿ ಚಿಂತಿಸಿ ತಮ್ಮ ಪ್ರಾಥಮಿಕ ಶಾಲೆಗಳನ್ನು
ಕನ್ನಡ ಮಾಧ್ಯಮ ಶಾಲೆಗಳನ್ನಾಗಿ ಬದಲಿಸಬೇಕು. ಸರ‍್ಕಾರಿ ಶಾಲೆಗಳಲ್ಲಂತೂ ಕನ್ನಡ ಮಾಧ್ಯಮವೇ ಮುಂದುವರೆದು
೭ನೆಯ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷನ್ನು ಚೆನ್ನಾಗಿ ಹೇಳಿಕೊಡಬೇಕು.  
ನಿವೃತ್ತ ನ್ಯಾಯಾಧೀಶರಾದ ಶ್ರೀ ರಾಮಾಜೋಯಿಸ್, ಸುಪ್ರಸಿದ್ಧ
ಬಾಹ್ಯಾಂತರಿಕ್ಷ ವಿಜ್ಞಾನಿ ಪ್ರೊ. ಯು ಆರ್ ರಾವ್, ವಿಜ್ಞಾನಿ ಪ್ರೊ. ಸಿ
ಎನ್ ಆರ್ ರಾವ್ ಅವರುಗಳ ಶಿಕ್ಷಣ ಮಾಧ್ಯಮ (ಪ್ರೌಢಶಾಲಾ ಪೂರ್ತಿ) ಕನ್ನಡ ಹಾಗೂ ಮಾಜಿ ರಾಷ್ಟ್ರಪತಿ
ಶ್ರೀ ಅಬ್ದುಲ್ ಕಲಾಂ ಅವರ ಶಿಕ್ಷಣ ಮಾಧ್ಯಮ ತಮಿಳು ಆಗಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮಹಾನ್
ದಿಗ್ಗಜ ಶ್ರೀ ಎನ್ ಆರ್ ನಾರಾಯಣಮೂರ‍್ತಿ ಅವರ ಆರಂಭದ ಶಿಕ್ಷಣ ಮಾಧ್ಯಮ ಕನ್ನಡವೇ ಆಗಿತ್ತು.
ಶಿಕ್ಷಣ ಮಾಧ್ಯಮದ ವಿಚಾರಗಳನ್ನು ಪ್ರೊ. ಯು ಆರ್
ಅನಂತಮೂರ್ತಿ ಅವರು ಸೋದಾಹರಣೆಗಳ ಮೂಲಕ ಅತ್ಯಂತ ತರ್ಕಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ವಿಶ್ಲೇಷಿಸಿರುವ
ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಡಾ. ಚಂದ್ರಶೇಖರ ಕಂಬಾರ, ಡಾ.
ಎಸ್ ಎಲ್ ಬೈರಪ್ಪ,, ಪ್ರೊ. ಚಂದ್ರಶೇಖರ ಪಾಟೀಲ, ಪ್ರೊ. ಎಲ್ ಎಸ್ ಶೇಷಗಿರಿರಾವ್, ಪ್ರೊ. ಬಿ ಕೆ ಚಂದ್ರಶೇಖರ್,
ಶ್ರೀ ಮಮ್ತಾಜ್ ಆಲಿಖಾನ್, ಶ್ರೀ ಸ ರಾ ಸುದರ್ಶನ,
ಡಾ. ಪಂಡಿತಾರಾಧ್ಯ, ಪ್ರೊ. ನಿರಂಜನಾರಾಧ್ಯ, ಡಾ. ಚಿದಾನಂದಮೂರ್ತಿ ಮುಂತಾಗಿ ಅನೇಕ ಚಿಂತಕರೂ ಸಹ ಇದೇ ರೀತಿಯ ಮೌಲ್ಯಯುತವಾದ ಚಿಂತನೆ ಗಳನ್ನು
ಪತ್ರಿಕೆಗಳ ಮೂಲಕ ಹಂಚಿಕೊಂಡಿದ್ದಾರೆ. ಡಾ. ಸಿ ಆರ್ ಚಂದ್ರಶೇಖರ್, ಪ್ರೊ.
ಜಿ ರಾಮಕೃಷ್ಣ, ಡಾ. ಪುರುಷೋತ್ತಮ ಮುಂತಾದ ಅನೇಕ ಮಹನೀಯರು ಶಿಕ್ಷಣದ ಭಾಷೆ
ಮತ್ತು ಬುದ್ಧಿವಂತಿಕೆ ವಿಷಯವನ್ನು ಕುರಿತು ಮೌಲ್ಯಯುತವಾದ ಲೇಖನಗಳನ್ನು ಬರೆದು ಪ್ರಾಥಮಿಕ ಶಿಕ್ಷಣಕ್ಕೆ
ಇಂಗ್ಲ್ಲಿಷ್ ಸರ್ವಥಾ ಯೋಗ್ಯವಲ್ಲ ಎಂಬುದನ್ನು ಸಮರ್ಥವಾಗಿ ಪ್ರತಿಪಾದಿಸಿದ್ದಾರೆ. ಪ್ರೊ. ಜಿ ವೆಂಕಟಸುಬ್ಬಯ್ಯ,
ಪ್ರೊ. ಜಿ ಎಸ್ ಶಿವರುದ್ರಪ್ಪ, 
ಶ್ರೀ ಪಾಟೀಲ ಪುಟ್ಟಪ್ಪ, ಶ್ರೀ ಜಿ ನಾರಾಯಣ,
ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಸಿ ಪಿ ಕೃಷ್ಣಕುಮಾರ್
ಮುಂತಾಗಿ ಅನೇಕ ಸುಪ್ರಸಿದ್ಧ ಚಿಂತಕರು ಹಾಗೂ ಶಿಕ್ಷಣ ತಜ್ಞರು ಪ್ರಾಥಮಿಕ ಶಾಲೆಗಳಲ್ಲಿನ ಶಿಕ್ಷಣ ಮಾಧ್ಯಮ
ಕನ್ನಡದಲ್ಲೇ ಇರಬೇಕೆಂದು ಹೇಳುತ್ತಿದ್ದಾರೆ. ಆದರೆ ಯಾರೂ ಇಂಗ್ಲಿಷ್ ವಿರೋಧಿಗಳಲ್ಲ; ಇಂಗ್ಲಿಷ್ ಬೇಡ ಎನ್ನುತ್ತಿಲ್ಲ.
ನಮ್ಮ ಮಕ್ಕಳ ಬುದ್ಧಿಶಕ್ತಿ ಹಾಗೂ ಅವರ ಇಂಗ್ಲಿಷ್
ತಿಳಿವಳಿಕೆಯ ಮಟ್ಟ ಎರಡೂ ಹೆಚ್ಚಾಗಿ ಅವರು ಪ್ರತಿಭಾಶಾಲಿಗಳಾಗಬೇಕು ಎಂಬುದು ಮಾತ್ರ ಇವರೆಲ್ಲರ ಮುಖ್ಯವಾದ
ಆಶಯ. ಮುಂದಿನ ಪೀಳಿಗೆಯವರ ಬುದ್ಧಿವಂತಿಕೆ ಹೆಚ್ಚಿನ ಮಟ್ಟದಲ್ಲಿರಬೇಕು, ಅವರು
ಇಂಗ್ಲಿಷ್‌ನಲ್ಲೂ ಪಾರಂಗತರಾಗಬೇಕು ಎಂಬುದೇ ಎಲ್ಲರ ಉದ್ದೇಶವಾಗಿದೆ. ಪ್ರಾಥಮಿಕ ಶಿಕ್ಷಣ ಪೂರ್ಣವಾಗಿ
ಕನ್ನಡದಲ್ಲಿ ಇಲ್ಲದಿದ್ದರೆ ಅತಿಶೀಘ್ರವಾಗಿ ಕನ್ನಡ ನಾಶವಾಗಿ ಬಿಡುತ್ತದೆ. ಕನ್ನಡ ಇದ್ದರೂ ಕೇವಲ ಅಲ್ಪಸ್ವಲ್ಪ
ಮಾತಿನ ಭಾಷೆಯಾಗಿ ಮಾತ್ರ ಉಳಿದಿರುತ್ತದೆ.
– ಚಿ. ವಿ. ಶ್ರೀನಾಥಶಾಸ್ತ್ರೀ
[ಸದಸ್ಯ, ವಿಜ್ಞಾನ ಮತ್ತು ತಂತ್ರಜ್ಞಾನ
ಅಕಾಡೆಮಿ, ಕರ್ನಾಟಕ ಸರ್ಕಾರ; ಪ್ರಧಾನ ಕಾರ್ಯದರ್ಶಿ,
ಕನ್ನಡ ಗಣಕ ಪರಿಷತ್ತು;
ವಿಜ್ಞಾನಿ (೧೯೭೩-೨೦೦೪), ರಾಷ್ಟ್ರೀಯ
ವೈಮಾಂತರಿಕ್ಷ ಪ್ರಯೋಗಶಾಲೆಗಳು, ಬೆಂಗಳೂರು; ದೂ:
೮೭೬೨೨೬೫೦೬೨]
Share This