ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ನಾನು ನೋಡಿದ ಇನ್ನೊಂದು ಚಿತ್ರ, ಬಿಹೇವಿಯರ್. ಎರ್ನೆಸ್ಟೋ ಡರನಸ್ ನಿರ್ದೇಶನದ ಕ್ಯೂಬಾದ
ಚಿತ್ರ ಇದು. ಒಂದು ಕಾಲಘಟ್ಟದ ಚಿತ್ರಣವನ್ನು ನೀಡುವುದರ ಜೊತೆಗೆ ವಿಶ್ವದಾದ್ಯಂತ
ಎಲ್ಲೂ ನಡೆಯಬಹುದಾದ, ನಡೆಯುತ್ತಿರುವ ಬಾಹ್ಯ ಪ್ರಪಂಚದಿಂದ ಮಕ್ಕಳ ಮೇಲಿನ
ಪ್ರಭಾವದ ಕುರಿತಾಗಿ ಚಿತ್ರ ಮಾತನಾಡುತ್ತದೆ. ಪಾರಿವಾಳವೊಂದನ್ನು ಹಿಡಿದಿರುವ
ಹುಡುಗ, ಚೆಲೋನಿಂದ ಚಿತ್ರ ಆರಂಭವಾಗುತ್ತದೆ. ಕೈಯಲ್ಲಿ
ಹಿಡಿದಿರುವ ಪಾರಿವಾಳದಿಂದ ಇನ್ನೊಂದು ಇನ್ನೂ ಗೂಡಿಗೆ ಮರಳದ ಪಾರಿವಾಳವನ್ನು ಕರೆಯುತ್ತಿರುತ್ತಾನೆ
ಆತ. ಆ ಇನ್ನೊಂದು ಪಾರಿವಾಳವೂ ಹಿಂದಿರುಗಿದಾಗ, ಪ್ರೀತಿಯಿಂದ ಅವೆರಡನ್ನೂ ಗೂಡಿಗೆ ಮರಳಿಸುತ್ತಾನೆ ಚೆಲೋ. ಆದರೆ
ಅವನ ಜೀವನದಲ್ಲಿ ಅವನು ಮನೆಗೆ ಬರುವುದನ್ನು ಕಾಯುವ ಒಂದು ಜೀವವಿಲ್ಲ. 

ಮಧ್ಯದ
ನಶೆಯಲ್ಲಿ ದಿನದೂಡುತ್ತಿರುವ ತಾಯಿ, ತಾನೇ ಚೆಲೋನ ತಂದೆ ಎಂದು ಒಪ್ಪಿಕೊಳ್ಳದ,
ಆದರೂ, ಚೆಲೋಗೆ ಹಣ ನೀಡಿ ಸಂಸಾರ ನಡೆಸುವ ತಂದೆ ಹೀಗೆ ಎಲ್ಲಾ
ಅಪೂರ್ಣ ವ್ಯಕ್ತಿತ್ವಗಳ ನಡುವೆ ಚೆಲೋ, ಒಳಗಿನಿಂದ ಮೃದು ಸ್ವಭಾವ ಹೊತ್ತು
ಹೊರ ಜಗತ್ತಿನಲ್ಲಿ ತೀವ್ರ ಚಟುವಟಿಕೆಗಳ, ಉದ್ಧಟ ಹುಡುಗನಾಗಿರುತ್ತಾನೆ.
ಅವನ ಶಾಲೆಯಲ್ಲಿ ಕಾರ್ಮೆಲ್ಲಾ ಎನ್ನುವ ವೃದ್ಧ ಶಿಕ್ಷಕಿ ಅನೇಕ ವರ್ಷಗಳಿಂದ ಆ ಶಾಲೆಯಲ್ಲಿ
ಪಾಠ ಮಾಡುತ್ತಾ ಮಕ್ಕಳ ಒಳಿತನ್ನು ಬಯಸುತ್ತಾ ಇದ್ದವಳು. ಆಕೆಗೆ ಮಕ್ಕಳ ಸಮಸ್ಯೆಗಳಿಗೆ
ಅವರ ಹಿನ್ನೆಲೆಯಲ್ಲಿ ಇರುವ ವ್ಯವಸ್ಥೆಯನ್ನು ಕಾಣುತ್ತದೆ. ಅವಳ ಅನುಭವದ
ಕಣ್ಣುಗಳಿಗೆ ಮಕ್ಕಳ ಎಲ್ಲಾ ಉಪದ್ರಗಳನ್ನೂ ಕರುಣೆಯಿಂದ ಕಾಣುವ ಶಕ್ತಿ ಇದೆ. ಚಿತ್ರ ಕಾರ್ಮೆಲ್ಲಾ ಹಾಗೂ ಚೆಲೋನ ನಡುವಿನ ನವಿರಾದ ಒಡನಾಟದ ಮೂಲಕ ಸಾಗುತ್ತಾ, ಗೂಡು ಬಿಟ್ಟು ಹೋದ ಪಾರಿವಾಳದಂಥಾ ಮುಗ್ಧ ಮನಸಿನ ಮಕ್ಕಳು, ಮರಳಿ
ಗೂಡು ಅಥವಾ ಶಾಲೆ ಎಂಬ ಸುರಕ್ಷಿತ ಸ್ಥಾನ ಸೇರುವವರೆಗಿನ ಅಪಾಯಗಳ ಕುರಿತಾಗಿ ಮಾತನಾಡುತ್ತದೆ.
ಮನೆಯೂ ಸುರಕ್ಷಿತ ಅಲ್ಲ ಎಂದಾದಾಗ ಸುರಕ್ಷೆ ನೀಡಲು ಶಾಲೆಯನ್ನೇ ಕಾರ್ಮೆಲ್ಲಾ ಅನುವಾಗಿಸುತ್ತಾಳೆ.
ಆಕೆಯ ಆಶಯ, ದುಃಖಃ ಎಲ್ಲವೂ ಆಕೆಯ ಒಂದು ಸಂಭಾಷಣೆಯಲ್ಲಿ
ಮೂಡಿ ಬರುತ್ತದೆ, ಶಾಲೆಯ ಒಳಗೆ ಇರುವವರೆಗೆ ಮಕ್ಕಳ ಆರೈಕೆ ನಮ್ಮದು,
ಆದರೆ ಶಾಲೆಯ ಹೊರಗೆ ಕಾಲಿಡುತ್ತಲೇ, ಅಲ್ಲಿ ಜೀವನದ ಕಡು
ವಾಸ್ತವತೆ ಮಕ್ಕಳನ್ನು ಕಾದಿದೆ, ಅದು ಬೀರುವ ಪರಿಣಾಮಗಳನ್ನು ನಾವು ಶಾಲೆಯ
ಅವಧಿಯಲ್ಲಿ ಗುಣಪಡಿಸಲು ಸಾಧ್ಯವೇ? ಎಂದು ಬೇಸರಿಸುತ್ತಾಳೆ ಕಾರ್ಮೆಲ್ಲಾ. 
ಒಂದೆಡೆ ಪಾರಿವಾಳದ ಸೂಕ್ಷ್ಮ ಜೀವನದ ಉಪಮೆಯನ್ನು ರೂಪಿಸುತ್ತಲೇ, ಹೊರ ಜಗತ್ತಿನ ಕ್ರೌರ್ಯಕ್ಕೆ, ನಾಯಿಗಳ ಜಗಳದ ಜೂಜನ್ನು
ಕಥನ ಬಳಸಿಕೊಳ್ಳುತ್ತದೆ. ರಕ್ತ ಸಿಕ್ತ ಅಖಾಡಗಳಲ್ಲಿ, ನಾಯಿಗಳೆರಡು ಭೀಕರವಾಗಿ ಹೋರಾಡುವ ದೃಶ್ಯಗಳನ್ನು ಅನೇಕ ಬಾರಿ ಚಿತ್ರ ಬಳಸಿಕೊಳ್ಳುತ್ತದೆ.
ಅಲ್ಲಿನ ಕ್ರೌರ್ಯ, ಅದಕ್ಕೆಂದು ನಾಯಿಗಳನ್ನು ಸಿದ್ಧಪಡಿಸುವ,
ಅವುಗಳಲ್ಲಿ ಸಿಟ್ಟನ್ನು, ಹಠವನ್ನು ಬಿತ್ತುವ ಕೆಲಸದಲ್ಲಿ
ತೊಡಗಿರುವ ಚೆಲೋ ಮನಸಿನ ಮೇಲೆ ಆಗಬಹುದಾದ ಪರಿಣಾಮಗಳು ಇತ್ಯಾದಿಗಳನ್ನು ಚಿತ್ರ ಸೂಕ್ಷ್ಮವಾಗಿ ಹೇಳುತ್ತಾ
ಹೋಗುತ್ತದೆ.
Share This